Showing posts with label ಧರ್ಮ. Show all posts
Showing posts with label ಧರ್ಮ. Show all posts

Wednesday, October 20, 2010

ಇಷ್ಟ ಕಷ್ಟ ದ ಕೊಡುಗೆ

ಇಷ್ಟವೆಂದು ಎನಬೇಡ, ಕಷ್ಟವೆಂದು ಎನಬೇಡ
ಇಷ್ಟ, ಕಷ್ಟದ ಕೊಡುಗೆ ಅವನಿಂದ ನಿನಗೆ
ಇದು ಬೇಕು ನನಗೆ, ಇದು ಬೇಡವೆನಗೆ
ನಿನ್ನಿಚ್ಚೆಗಿಲ್ಲ ಬೆಲೆ !!!

"ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" , ಎಂಬುದು ದಾಸವಾಣಿ. ಇದರಲ್ಲಿ ಇಷ್ಟ, ಕಷ್ಟ ದ ಪ್ರಶ್ನೆಯೇ ಇಲ್ಲ. ಏಕೆಂದರೆ ಅನ್ನ, ವಸ್ತ್ರ, ವಸತಿ, ಪ್ರತಿಯೊಬ್ಬ ಮನುಷ್ಯನು ಅನಿವಾರ್ಯವಾಗಿ ಅಪೇಕ್ಷಿಸುವ ಮೂಲಭೂತ ವಸ್ತುಗಳು. ಇವುಗಳಿಗಾಗಿ ಮಾತ್ರ ಆತನ ಹೋರಾಟ. ಅತಿಯಾಸೆಯ ಜನರು ಇಂದು ನಮ್ಮ ಮುಂದೆ ಕಂಡು ಬರುತ್ತಾರೆ. ಇಷ್ಟವೆಂದು, ಆಸೆಪಟ್ಟು, ನಂತರ ಅದನ್ನು ಅನುಭವಿಸಲು ಕಷ್ಟ ಪಡುತ್ತಾರೆ ಅವರು. ಏಕೆಂದರೆ ಅತಿ ಯಾವತ್ತೂ ಒಳ್ಳೆಯದಲ್ಲ.
ನನಗದು ಬೇಕು, ನನಗದು ಬೇಡ ಎಂದು ಹಠ ಮಾಡುವವರಿದ್ದಾರೆ. ನನಗಿದು ಇಷ್ಟ ಎನ್ನುವವರು ಇದ್ದಾರೆ. ಆದರೇ ನಮ್ಮ ಈ ರೀತಿ ನೀತಿಗಳಿಗೆ ಏನಾದರು ಅರ್ಥ ವಿದೆಯೇ ? ಎಲ್ಲವು ವಿಧಿಯು ಬರೆದ ಹಾಗೆಯೇ ನಡೆಯುತ್ತದೆ. ನಮ್ಮ ಹೋರಾಟ ಏನಿದ್ದರು ಬದುಕಿಗಾಗಿ ಮಾತ್ರ. ಆದರೇ ಆ ಬದುಕನ್ನು ಕೊಡುವವನೂ ಅವನೇ. ಅಂದರೆ ಹೋರಾಟಕ್ಕೆ ಏನು ಬೆಲೆ ? ಎಲ್ಲವನ್ನು ಅವನಿಗೆ ಒಪ್ಪಿಸಿ, ನೀನಾಡಿಸಿ ದಂತೆ ಆಡುವೆ ನಾನು, ಎಂದು ನಿರ್ಲಿಪ್ತತೆ ಯಿಂದ ಇರಬಹುದಲ್ಲವೇ ? ಆದರೇ, ಅಂತರಂಗದಲ್ಲಿ ಬೆಳಕೊಂದು ಇದ್ದಾರೆ ಅದು ನಮ್ಮನ್ನು ಸುಮ್ಮನೆ ಇರಗೂಡುವುದಿಲ್ಲ. ಫಲಿತಾಂಶ ನಮ್ಮ ಕೈಯಲ್ಲಿ ಇಲ್ಲ ಎಂಬುದನ್ನು ಅರಿತು ಪ್ರಯತ್ನಿಸಬೇಕು. ಅಲ್ಪಜ್ಞಾನಿ ಮಾನವನಿಗೆ, ಸರ್ವಜ್ನನಾದ ಭಗವಂತನನ್ನು ಕಲ್ಪಿಸಿಕೊಳ್ಳುವುದು ಅಸಾದ್ಯವಾಗಿರುವಾಗ ಇನ್ನು ಅರಿಯುವುದೆಂತು ? ಅರಿಯಲು ಸಾಧ್ಯವಾಗದಾಗ ಅವನನ್ನು ಮೀರುವುದೆಂತು? ಹಾಗಾಗಿ ಎಲ್ಲವನ್ನು ಅವನಿಗೊಪ್ಪಿಸಿ, ಫಲಾಪೇಕ್ಷೆ ಇರಿಸಿಕೊಳ್ಳದೆ ಬಂದಿದ್ದನ್ನು ಸ್ವೀಕರಿಸುವ ಭಾವ ರೂಢಿಸಿಕೊಂಡರೆ, ಅದು ಒಳಿತಿನ ದಾರಿ.
ಕಷ್ಟ - ಇಷ್ಟ, ಬೇಕು - ಬೇಡ, ಎಂಬ ಭಾವದಿಂದ ಬದುಕಿನ ಪರಿಪೂರ್ಣತೆಯನ್ನು ಅನುಭವಿಸಲು ಸಾದ್ಯವಿಲ್ಲ. ಕಷ್ಟದಲ್ಲಿಯೇ ಇಷ್ಟವಿದೆ. ಬೇಡದೊಡಲಿನಲ್ಲಿಯೇ ಬೇಕೆಂಬುದಿದೆ. ಅವನು ತಿರುಗಿಸುತ್ತಿರುವ ಬುಗುರಿಯಾಗಿರುವ ನಾವು ಅವನನ್ನು ಮೀರುವುದೆಂತು ? ನಾವು ಮಾಡುವ ಕೆಲ್ಸವೆಲ್ಲವನ್ನು ಅವನ ಪೂಜೆ ಎಂದೇ ತಿಳಿಯಬೇಕು. ಪೂಜೆ ಎಂದರೆ ನಮ್ಮನ್ನು ಅವನಿಗೊಪ್ಪಿಸುವ ರೀತಿ. ಸರ್ವಸ್ಥವನ್ನು ಅವನಿಗೆ ಸಮರ್ಪಿಸಿದಾಗ ಮಾತ್ರ ನಮ್ಮ ಬದುಕಿಗೆ ಒಂದರ್ಥ ಕಂಡು ಬರುತ್ತದೆ. ನಮ್ಮ ಇಷ್ಟವು ಅವನೇ, ಕಷ್ಟವು ಅವನೇ, ನಮ್ಮ ಬೇಕು ಅವನೇ, ನಮ್ಮ ಬೇಡವು ಅವನೇ, ಎಂದರಿತು ಮಾಡುವ ಕೆಲಸಕ್ಕೆ, ಅವನು ತನ್ನ ಸಮ್ಮತಿಯ ಮುದ್ರೆಯನ್ನು ಒಡ್ಡುತ್ತಾನೆ. ಬದುಕಿಗೊಂದು ಧನ್ಯತೆಯನ್ನು ಕರುಣಿಸುತ್ತಾನೆ.
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು