Showing posts with label ಸೈಬರ್ ಕ್ರೈಂ. Show all posts
Showing posts with label ಸೈಬರ್ ಕ್ರೈಂ. Show all posts

Wednesday, July 15, 2009

The Youngest Hacker of INDIA - ಠಕ್ಕರನ್ನು ಹೆಕ್ಕಿ ಹಿಡಿಯುತ್ತಿರುವ ಟೆಕ್ಕಿ - The Techie Caught Thieves

Guys/Gals,
Once more one more good article from Pratap Sinha Sir.
Read and put your comments.
ಅಂಕಿತ್ ಗುಜರಾತಿನವನು. ಆತನ ವಿವಾಹ ನಿಶ್ಚಿತಾರ್ಥವಾಯಿತು. ಅದರ ಜತೆಗೆ ವಿಚಿತ್ರ ಸಮಸ್ಯೆಯೂ ಶುರುವಾಯಿತು. ಅಂಕಿತ್‌ನ ಸೆಲ್‌ಫೋನ್‌ಗೆ ಆತ ವಿವಾಹವಾಗಲಿದ್ದ ವಧುವಿನ ಸೆಲ್‌ನಿಂದ ದಿನಕ್ಕೆ ಐದಾರು ಎಸ್ಸೆಮ್ಮೆಸ್‌ಗಳು ಬರಲಾರಂಭಿಸಿದವು. ಆದರೆ ಅವು ಪ್ರೀತಿ, ಕಾಳಜಿಯ ಸಂದೇಶಗಳಾಗಿರಲಿಲ್ಲ. ಎಚ್ಚರಿಕೆಯ ಗಂಟೆಗಳಾಗಿದ್ದವು. ನನಗೆ ಬೇರೊಬ್ಬನ ಜತೆ ಸಂಬಂಧವಿದೆ. ನನ್ನನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹುಶಾರ್. ಇಂತಹ ಎಸ್ಸೆಮ್ಮೆಸ್‌ಗಳನ್ನು ಕಂಡು ಆಶ್ಚರ್ಯಚಕಿತನಾದ ಅಂಕಿತ್, ಕಾರಣ ತಿಳಿದುಕೊಳ್ಳುವ ಸಲುವಾಗಿ ನೇರವಾಗಿ ವಧುವನ್ನು ಕಂಡು ವಿಚಾರಿಸಿದಾಗ ಅಂತಹ ಎಸ್ಸೆಮ್ಮೆಸ್‌ಗಳನ್ನು ಆಕೆ ಕಳುಹಿಸಿಯೇ ಇರಲಿಲ್ಲ!

ಅದರ ಬಗ್ಗೆ ಆಕೆಗೆ ಅರಿವೂ ಇರಲಿಲ್ಲ. ಇದೆಂಥ ವಿಚಿತ್ರ ಎಂದು ಸುಮ್ಮನಾಗುವಂತೆಯೂ ಇಲ್ಲ. ಇಬ್ಬರಿಗೂ ಪರಸ್ಪರರ ಮೇಲೆ ವಿಶ್ವಾಸವಿದ್ದರೂ ನಿತ್ಯವೂ ಬರುತ್ತಿದ್ದ ಎಸ್ಸೆಮ್ಮೆಸ್‌ಗಳು ಮನಃಶಾಂತಿಯನ್ನು ಕೆಡಿಸುತ್ತಿದ್ದವು. ಅಂಕಿತ್ ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ನ ಮೊರೆ ಹೋದ. ಆತ ನೀಡಿದ ದೂರಿನ ತನಿಖೆಯ ಜವಾಬ್ದಾರಿ ಸನ್ನಿ ವಾಘೇಲಾನ ಹೆಗಲಿಗೆ ಬಿತ್ತು. ಎಸ್ಸೆಮ್ಮೆಸ್ ಸೆಂಟರ್‌ನ ನಂಬರ್ ತೆಗೆದುಕೊಂಡ ಸನ್ನಿ ತನಿಖೆ ಆರಂಭಿಸಿದ. ಆ ಎಸ್ಸೆಮ್ಮೆಸ್‌ಗಳನ್ನು ವೈಬ್‌ಸೈಟೊಂದರ ಮೂಲಕ ಕಳುಹಿಸಲಾಗಿದೆ ಎಂಬುದನ್ನು ಪತ್ತೆ ಮಾಡಿದ. ಆ ಮೂಲಕ ಯಾವ ಕಂಪ್ಯೂಟರ್‌ನಿಂದ ಕಳುಹಿಸಲಾಗುತ್ತಿದೆ ಎಂಬುದನ್ನು ‘ಐಪಿ’ ಅಡ್ರೆಸ್ ಮೂಲಕ ಕಂಡು ಹುಡುಕಿದ. ಒಂದೇ ದಿನದಲ್ಲಿ ಇಷ್ಟೆಲ್ಲಾ ಕಸರತ್ತುಗಳನ್ನು ಮುಗಿಸಿದ ಸನ್ನಿ, ಅಪರಾಧಿಯನ್ನೂ ಸಿಕ್ಕಿಬೀಳಿಸಿದ. ಆತ ಮತ್ತಾರೂ ಆಗಿರಲಿಲ್ಲ, ಅಂಕಿತ್‌ನೊಂದಿಗೆ ನಿಶ್ಚಿತಾರ್ಥವಾಗಿದ್ದ ಹುಡುಗಿಯ ಪಕ್ಕದ ಮನೆಯ ಗೆಂಡೇತಿಮ್ಮ!
ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಮಧ್ಯೆ ಪ್ರತಿಷ್ಠಿತ ಕಾಲೇಜಾದ ‘ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆಫ್ ಗುಜರಾತ್’ನ ನಾಲ್ವರು ವಿದ್ಯಾರ್ಥಿನಿ ಯರು ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ನ ಮುಂದೆ ದೂರೊಂದನ್ನು ಸಲ್ಲಿಸಲು ಬಂದರು. ಯಾರೋ ಕಿಡಿಗೇಡಿಗಳು “ಆರ್ಕಟ್ ಡಾಟ್‌ಕಾಮ್”ನಲ್ಲಿ ಈ ವಿದ್ಯಾರ್ಥಿನಿಯರ ಪ್ರೊಫೈಲ್ ಸೃಷ್ಟಿಸಿ, ಅಶ್ಲೀಲ ಚಿತ್ರಗಳನ್ನು ಹಾಕಿದ್ದರು. ಜತೆಗೆ ಆರ್ಕಟ್‌ಗೆ ಇಣುಕುವವರಿಗೆ ಸ್ನೇಹದ ಬಲೆ ಬೀಸಿ ಅವರೊಂದಿಗೆ ಅಶ್ಲೀಲ ಸಂಭಾಷಣೆಯನ್ನೂ ನಡೆಸುತ್ತಿದ್ದರು. ಅಲ್ಲದೆ ಆ ವಿದ್ಯಾರ್ಥಿನಿಯರ ನೈಜ ಸ್ನೇಹಿತರನ್ನೂ ‘ಫ್ರೆಂಡ್ಸ್ ಲಿಸ್ಟ್’ಗೆ ಸೇರಿಸಿಕೊಂಡು ಸ್ಕ್ರ್ಯಾಪ್ ಬುಕ್‌ನಲ್ಲಿ ಸರಸ ಸಲ್ಲಾಪ ನಡೆಸುತ್ತಿದ್ದರು. ಹೀಗೆ ತಮ್ಮ ಚಾರಿತ್ರ್ಯಕ್ಕೆ ಯಾರೋ ಮಸಿ ಬಳಿಯಲು ಯತ್ನಿಸುತ್ತಾರೆ ಎಂಬುದು ಅರಿವಾದ ಕೂಡಲೇ ಆ ವಿದ್ಯಾರ್ಥಿನಿಯರು ದಾರಿ ಕಾಣದೆ ಕ್ರೈಮ್ ಬ್ರ್ಯಾಂಚ್‌ಗೆ ಬಂದಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೂ ಸನ್ನಿ ವಾಘೇಲಾನೇ. ಆರ್ಕಟ್‌ನ ಮೇಲೆ ನಿಗಾ ಇಡಲು ಆರಂಭಿಸಿದ ಸನ್ನಿ, ಆ ಕಿಡಿಗೇಡಿ ಆನ್‌ಲೈನ್‌ಗೆ ಬರುವುದನ್ನೇ ಕಾದು ಕುಳಿತ. ಆನ್‌ಲೈನ್‌ಗೆ ಬಂದ ಕೂಡಲೇ ತಂತ್ರeನದ ಸಹಾಯದಿಂದ ಆರ್ಕಟ್‌ಗೆ ಲಾಗ್ ಇನ್ ಆಗುತ್ತಿದ್ದ ಕಂಪ್ಯೂಟರ್‌ನ ಐಪಿ ಅಡ್ರೆಸ್ ತಿಳಿದುಕೊಂಡ. ಕೂಡಲೇ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ, ಅಪರಾಧಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದುಬಿಟ್ಟ. ಈ ಬಾರಿ ಸನ್ನಿ ತೆಗೆದುಕೊಂಡಿದ್ದು ೫ ದಿನಗಳನ್ನು.

ಸನ್ನಿಯೇನು ಸಾಮಾನ್ಯ ವ್ಯಕ್ತಿ ಎಂದು ಭಾವಿಸಬೇಡಿ.

ಕಳೆದ ಕೆಲವು ತಿಂಗಳುಗಳಲ್ಲಿ ಜೈಪುರ, ಬೆಂಗಳೂರು, ಅಹಮದಾಬಾದ್, ಸೂರತ್, ದಿಲ್ಲಿ ಹೀಗೆ ಒಂದರ ಹಿಂದೆ ಒಂದರಂತೆ ಸಂಭವಿಸಿದ ಬಾಂಬ್ ಸ್ಫೋಟಗಳನ್ನು ನೆನಪು ಮಾಡಿಕೊಳ್ಳಿ. ಹಾಗೆ ಪ್ರತಿ ಬಾರಿ ಸ್ಫೋಟಗಳಾದಾಗಲೂ ಅದರ ಬೆನ್ನಲ್ಲೇ, ಇಲ್ಲವೇ ಸ್ಫೋಟಕ್ಕೂ ಕೆಲವು ನಿಮಿಷಗಳ ಮೊದಲು “ಇಂಡಿಯನ್ ಮುಜಾಹಿದ್ದೀನ್” ಎಂಬ ಹೆಸರಿನಲ್ಲಿ ಎಲ್ಲ ಪತ್ರಿಕೆ, ಪೊಲೀಸ್ ಹಾಗೂ ಸರಕಾರಿ ಕಚೇರಿಗಳಿಗೂ ಇ-ಮೇಲ್‌ಗಳು ರವಾನೆಯಾಗುತ್ತಿದ್ದವು. ಆದರೆ ಐಪಿ ಅಡ್ರೆಸ್ ಕಂಡುಹಿಡಿದು ಆ ಇ-ಮೇಲ್‌ಗಳನ್ನು ಎಲ್ಲಿಂದ ಕಳುಹಿಸಲಾಗುತ್ತಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟಕ್ಕೂ ತನಿಖೆಯನ್ನು ದಾರಿ ತಪ್ಪಿಸುವ ಸಲುವಾಗಿ ಯಾರದ್ದೋ ಅಸುರಕ್ಷಿತ “Wi-Fi”(ಕೇಬಲ್ ರಹಿತ ಇಂಟರ್‌ನೆಟ್ ವ್ಯವಸ್ಥೆ) ನೆಟ್‌ವರ್ಕ್ ಮೂಲಕ ಇ-ಮೇಲ್‌ಗಳನ್ನು ಕಳುಹಿಸಲಾಗುತ್ತಿತ್ತು. ಹಾಗಾಗಿ ಪ್ರತಿಬಾರಿ ಬಾಂಬ್‌ಸ್ಫೋಟಗಳಾದಾಗಲೂ ಲಷ್ಕರೆ ತಯ್ಬಾ, ಜೈಶೆ ಮೊಹಮದ್, ಸಿಮಿ ಎಂಬ ಹೆಸರುಗಳನ್ನೇ ಹೇಳುತ್ತಿದ್ದ ಪೊಲೀಸರಿಗೆ, ಇದ್ಯಾವುದೀ ‘ಇಂಡಿಯನ್ ಮುಜಾಹಿದ್ದೀನ್’ ಎಂದು ತಲೆಕೆರೆದುಕೊಳ್ಳುವಂತಾಗಿತ್ತು.
ಅಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬಂದಿದ್ದೇ ಸನ್ನಿ ವಾಘೇಲಾನ ಬುದ್ಧಿಶಕ್ತಿ.

೧೯೯೬ರಲ್ಲೇ ಅನುಮಾನಕ್ಕೆಡೆಯಾಗಿದ್ದ ‘ಸಿಮಿ’ಯನ್ನು ನಿಷೇಧ ಮಾಡಿದ ನಂತರ ವಿವಿಧ ರೂಪಗಳಲ್ಲಿ ತಲೆಯೆತ್ತು ತ್ತಿರುವ ಭಯೋತ್ಪಾದಕ ಸಂಘಟನೆಗಳ ಇತ್ತೀಚಿನ ಅವತಾ ರವೇ ‘ಇಂಡಿಯನ್ ಮುಜಾಹಿದೀನ್’. ಇದರ ಒಂದು ವೈಶಿಷ್ಟ್ಯವೆಂದರೆ ಇದುವರೆಗೂ ದೇಶದ್ರೋಹಿಗಳು ಬಾಂಬ್ ಸ್ಫೋಟಿಸಿ ಪರಾರಿಯಾಗುತ್ತಿದ್ದರು, ಇಲ್ಲವೇ ತಲೆಮರೆಸಿಕೊಳ್ಳುತ್ತಿದ್ದರು. ಸ್ಫೋಟಕ್ಕೆ ಕಾರಣ ಯಾರು ಎಂಬುದರ ಸುಳಿವೇ ಸಿಗುತ್ತಿರಲಿಲ್ಲ. ಹಾಗಾಗಿ ನಮ್ಮ ಪೊಲೀಸರು ಹಾಗೂ ಗೃಹ ಇಲಾಖೆ ಸಿದ್ಧಸೂತ್ರವೊಂದನ್ನು ಇಟ್ಟುಕೊಂಡಿತ್ತು. ‘ಲಷ್ಕರೆ, ಜೈಶೆ’ ಎಂದು ಬಾಯಿಗೆ ಬಂದ ಒಂದು ಹೆಸರು ಹೇಳಿ ಆರೋಪ ಹೊರಿಸಿ ಬಿಡುತ್ತಿತ್ತು. ಅದನ್ನು ಕಾಲಾಂತರದಲ್ಲಿ ಜನರೂ ಮರೆಯುತ್ತಿದ್ದರು, ತನಿಖೆಯಿಂದಲೂ ಏನೂ ಸಾಬೀತಾಗುತ್ತಿರಲಿಲ್ಲ. ಮತ್ತೆ ಬಾಂಬ್ ಸ್ಫೋಟವಾದ ಕೂಡಲೇ ಅದೇ ಹೆಸರು, ಅದೇ ಆರೋಪಗಳನ್ನು ಪುನರುಚ್ಚರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಲೆಯೆತ್ತಿರುವ ‘ಇಂಡಿಯನ್ ಮುಜಾಹಿದೀನ್’ ಮಾತ್ರ ತೀರಾ ಭಿನ್ನ ಕಾರ್ಯತಂತ್ರ ಅನುಸರಿಸುತ್ತಿದೆ. ಅದಕ್ಕೆ ಪ್ರಚಾರದ ಗೀಳು ಅಂಟಿಕೊಂಡಿದೆ. ಜನರನ್ನು ಭಯಭೀತಗೊಳಿಸುವ ಉದ್ದೇಶವನ್ನೂ ಹೊಂದಿದೆ. ಹಾಗಾಗಿ ಸ್ಫೋಟ ನಡೆಯುವುದಕ್ಕಿಂತ ಕೆಲವೇ ನಿಮಿಷ, ಸೆಕೆಂಡ್‌ಗಳ ಮೊದಲು ಇ-ಮೇಲ್ ಕಳುಹಿಸಿ ಎಲ್ಲಿ ಬಾಂಬ್ ಸ್ಫೋಟಿಸಲಿದೆ ಎಂಬುದರ ಸುಳಿವು ನೀಡುತ್ತಿತ್ತು. ಸ್ಫೋಟದ ನಂತರ ತಾನೇ ಜವಾಬ್ದಾರ ಎಂದು ಹೇಳಿಕೊಳ್ಳುತ್ತಿತ್ತು. ಹೀಗೆ ಪ್ರಚಾರದ ಹಿಂದೆ ಬಿದ್ದಿರುವ, ಆ ಮೂಲಕ ಜಗತ್ತಿನ ಗಮನ ಸೆಳೆಯಲು ಯತ್ನಿಸುತ್ತಿರುವ ಇಂಡಿಯನ್ ಮುಜಾಹಿದೀನ್ ತನ್ನದೇ ಆದ ಮಾಧ್ಯಮ ಕೇಂದ್ರವನ್ನು ಹೊಂದಿದೆ. ಜುಲೈ ೨೬ರಂದು ನಡೆದ ಅಹಮದಾಬಾದ್ ಸ್ಫೋಟಕ್ಕೆ ಸ್ವಲ್ಪ ಮೊದಲು ಅಂದರೆ ಸಾಯಂಕಾಲ ೬.೪೦ಕ್ಕೆ ಇ-ಮೇಲ್ ಕಳುಹಿಸಿದ್ದು ಈ ಮಾಧ್ಯಮ ಕೇಂದ್ರವೇ. ಅಂದು ‘alarbi_gujarat@yahoo.com’ ಎಂಬ ಐಡಿಯಿಂದ ಇ-ಮೇಲನ್ನು ಕಳುಹಿಸಲಾಗಿತ್ತು. ಅದರ ಐಪಿ ಅಡ್ರೆಸ್ “೨೧೦.೨೧೧.೧೩೩.೨೦೦” ಅನ್ನು ಬೆನ್ನುಹತ್ತಿ ಹೋದ ಪೊಲೀಸರು ತಲುಪಿದ್ದು ಮುಂಬೈನ ಕೆನೆತ್ ಹೇವುಡ್‌ನ ನಿವಾಸವನ್ನು. ಆದರೆ ಕೆನೆತ್ ಹೇವುಡ್ ಭಯೋತ್ಪಾದಕನೇನೂ ಆಗಿರಲಿಲ್ಲ. ಆತನ ಅಸುರಕ್ಷಿತ “Wi-Fi” ವ್ಯವಸ್ಥೆಯನ್ನು ಬಳಸಿಕೊಂಡು ಭಯೋತ್ಪಾದಕರು ಮೇಲ್ ಕಳುಹಿಸಿದ್ದರು. ಹಾಗಾಗಿ ಪೊಲೀಸರು ಚಳ್ಳೆಹಣ್ಣು ತಿನ್ನಬೇಕಾಯಿತು. ೨೦೦೮, ಜುಲೈ ೩೧ರಂದು “alarbi_gujarat@yahoo.com” ಎಂಬ ಐಡಿಯಿಂದ ಮತ್ತೆ ಟೆರರ್ ಇ-ಮೇಲ್ ಬಂತು. ಅದರ ಐಪಿ ಅಡ್ರೆಸ್ಸನ್ನು ಬೆನ್ನತ್ತಿ ಹೋದಾಗ ಬರೋಡಾ ಮೆಡಿಕಲ್ ಕಾಲೇಜಿಗೆ ಬಂದು ತಲುಪಬೇಕಾಯಿತು. ೨೦೦೮, ಆಗಸ್ಟ್ ೨೩ರಂದು “alarbi.alhindi@gmail.com”ನಿಂದ ಬಂದ ಮತ್ತೊಂದು ಇ-ಮೇಲ್‌ನ ಐಪಿ ಅಡ್ರೆಸ್ ಹುಡುಕಿಕೊಂಡು ಹೋದಾಗ ಮುಂಬೈನ ಖಾಲ್ಸಾ ಕಾಲೇಜು ಸಿಕ್ಕಿತು. ಅಂದರೆ ಭಯೋತ್ಪಾದಕರು ಯಾರದ್ದೋ “Wi-Fi” ವ್ಯವಸ್ಥೆಯ ಮೂಲಕ ಕದ್ದುಮುಚ್ಚಿ ಇ-ಮೇಲ್ ಮಾಡುತ್ತಿದ್ದರು. ಅದನ್ನು ಪತ್ತೆಹಚ್ಚಲು ಹೆಣಗುತ್ತಿದ್ದ ಗುಜರಾತ್ ಪೊಲೀ ಸರು ಮುಖ ಮಾಡಿದ್ದು ಸನ್ನಿ ವಾಘೇಲಾನತ್ತ. ಅಷ್ಟಕ್ಕೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಂತಹ ಪ್ರತಿಭಾನ್ವಿತರ ಬುದ್ಧಿಶಕ್ತಿಯನ್ನು ಬಳಸಿಕೊಳ್ಳುತ್ತಿರುವ ಉಗ್ರರನ್ನು ಪತ್ತೆ ಹಚ್ಚುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿದ ಸನ್ನಿ ವಾಘೇಲಾ, ತನ್ನೆಲ್ಲಾ ಜಾಣ್ಮೆಯನ್ನು ಪಣಕ್ಕಿಟ್ಟು ಶೋಧನೆ ಆರಂಭಿಸಿದ. ಭಯೋತ್ಪಾದಕರು ಯಾರದ್ದೋ “Wi-Fi” ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ದಾರಿ ತಪ್ಪಿಸುತ್ತಿದ್ದರೂ Media Access Control ಮೂಲಕ ಅವರು ಇ-ಮೇಲ್ ಕಳುಹಿಸುತ್ತಿದ್ದ ಕಂಪ್ಯೂಟರ್‌ಗಳನ್ನು ಪತ್ತೆಹಚ್ಚುವಲ್ಲಿ ಸನ್ನಿ ಸಫಲನಾದ. ಹಾಗೆ ಆತ ಕಲೆಹಾಕಿದ ಮಾಹಿತಿಯಿಂದಾಗಿಯೇ ಮೊನ್ನೆ ಅಕ್ಟೋಬರ್ ೬ರಂದು ಆಸಿಫ್ ಬಶೀರ್ ಶೇಕ್, ಮೊಹಮದ್ ಮನ್ಸೂರ್ ಅಸ್ಗರ್ ಪೀರ್‌ಭಾಯ್, ಮುಬಿನ್ ಖಾದರ್ ಶೇಕ್, ಮೊಹಮದ್ ಆತಿಕ್ ಮೊಹಮದ್ ಇಕ್ಬಾಲ್, ದಸ್ತಗಿರ್ ಫಿರೋಝ್ ಮುಜಾವರ್, ಮೊಹಮದ್ ಅಕ್ಬರ್ ಇಸ್ಮಾಯಿಲ್, ಅಹಮದ್ ಬಾವಾ ಅಬೂಬಕರ್ ಮುಂತಾದ ೧೫ ಜನರನ್ನು ನಮ್ಮ ಮಂಗಳೂರು, ಬಾಂಬೆ ಹಾಗೂ ಇತರೆಡೆಗಳಲ್ಲಿ ಪೊಲೀಸರು ಬಂಧಿಸಲು ಸಾಧ್ಯವಾಗಿದ್ದು. ಅದರಲ್ಲೂ ಇಂಡಿಯನ್ ಮುಜಾಹಿದೀನ್‌ನ ಮಾಧ್ಯಮ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದ ಪುಣೆಯ ಮೊಹಮದ್ ಪೀರ್‌ಭಾಯ್ ಹಾಗೂ ಮುಬಿನ್ ಖಾದರ್ ಶೇಕ್‌ನನ್ನು ಬಂಧಿಸಿದ್ದಂತೂ ದೊಡ್ಡ ಸಾಧನೆಯೇ ಸರಿ. ಅದರ ಹೆಗ್ಗಳಿಕೆ ಸನ್ನಿಗೆ ಸಲ್ಲಬೇಕು.

ಇಂದು ಇಡೀ ದೇಶದ ಗಮನ ಸೆಳೆದಿರುವ ಸನ್ನಿಗೆ ಕೇವಲ ೨೧ ವರ್ಷ.

ಆತನೊಬ್ಬ ‘ಎಥಿಕಲ್ ಹ್ಯಾಕರ್’. ಆತನಿಗೆ ಹ್ಯಾಕಿಂಗ್ ಗೀಳು ಅಂಟಿಕೊಂಡಿದ್ದು ಪ್ರಥಮ ಪಿಯುಸಿಯಲ್ಲಿದ್ದಾಗ. ಒಮ್ಮೆ ಆತನ ಇ-ಮೇಲನ್ನು ಯಾರೋ ಹ್ಯಾಕ್ ಮಾಡಿ ಬಿಟ್ಟರು. ಆ ಘಟನೆಯ ನಂತರ ಹ್ಯಾಕಿಂಗ್ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ ಸನ್ನಿ, ಹ್ಯಾಕಿಂಗ್ ಬಗ್ಗೆ ಆಸಕ್ತಿ ಹೊಂದಿರುವವರ ಆನ್‌ಲೈನ್ ಗುಂಪೊಂದನ್ನು ಕಟ್ಟಿಕೊಂಡ. ಅವರ ಜತೆ ಹ್ಯಾಕಿಂಗ್‌ನ ಒಳ-ಹೊರಗುಗಳ ಬಗ್ಗೆ ಚರ್ಚೆ ನಡೆಸಿದ. ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡ. ಇ-ಮೇಲ್ ಹ್ಯಾಕಿಂಗ್ ಬಗ್ಗೆ ತಿಳಿದುಕೊಂಡ ನಂತರ, ‘ಲಾಗ್ ಆಫ್’ ಮಾಡಿದ ನಂತರವೂ ‘ಕುಕಿ’ಗಳ ಸಹಾಯದಿಂದ ಇತರರ ಆರ್ಕಟ್ ಐಡಿಯೊಳಕ್ಕೆ ಹೊಕ್ಕುವುದು ಹಾಗೂ ಖೊಟ್ಟಿ ಎಸ್ಸೆಮ್ಮೆಸ್ (SMS Spoofing)ನತ್ತ ಆತನ ಆಸಕ್ತಿ ತಿರುಗಿತು. ಯಾರದ್ದೋ ನಂಬರ್‌ನಿಂದ ಇನ್ಯಾರಿಗೋ ಎಸ್ಸೆಮ್ಮೆಸ್ ಕಳುಹಿಸುವ ವಿದ್ಯೆಯನ್ನೂ ಕರಗತ ಮಾಡಿಕೊಂಡ. ಆದರೆ ಅದನ್ನು ಪ್ರಯೋಗಿಸಿದ್ದು ಯಾರ ಮೇಲೆ ಗೊತ್ತೆ? ಒಮ್ಮೆ ಕಾಲೇಜಿನಲ್ಲಿ ಇಂಟರನಲ್ ಪರೀಕ್ಷೆ ಇತ್ತು. ಆದರೆ ಸನ್ನಿ ಓದಿಕೊಂಡಿರಲಿಲ್ಲ. ಹಾಗಾಗಿ ಪರೀಕ್ಷೆ ಬರೆಯುವ ಧೈರ್ಯವಿರಲಿಲ್ಲ. ಹಾಗಂತ ಚಕ್ಕರ್ ಹೊಡೆಯುವಂತೆಯೂ ಇರಲಿಲ್ಲ. ಆತ ವ್ಯಾಸಂಗ ಮಾಡುತ್ತಿದ್ದ ‘ನಿರ್ಮಾ’ ಕಾಲೇಜಿನಲ್ಲಿ ಕಟ್ಟುನಿಟ್ಟಾದ ನಿಯಮಗಳಿದ್ದವು. ಹಾಗಾಗಿ ತಾನು ಕಲಿತಿದ್ದ SMS Spoofing ವಿದ್ಯೆಯನ್ನು ಕಾಲೇಜಿನ ಪ್ರಾಂಶುಪಾಲರ ಮೇಲೆಯೇ ಪ್ರಯೋಗಿಸಲು ಮುಂದಾದ! “ಕಾರಣಾಂತರದಿಂದ ಇಂಟರ್ನಲ್ ಪರೀಕ್ಷೆ ಯನ್ನು ಮುಂದೂಡಲಾಗಿದೆ” ಎಂಬ ಸಂದೇಶವನ್ನು ಪ್ರಾಂಶುಪಾಲರ ನಂಬರ್‌ನಿಂದ ಎಲ್ಲ ವಿದ್ಯಾರ್ಥಿಗಳಿಗೂ ಕಳುಹಿಸಿದ ಸನ್ನಿ, ವಿದ್ಯಾರ್ಥಿಗಳು ಗೈರು ಹಾಜರಾಗುವಂತೆ ಮಾಡಿ ಪರೀಕ್ಷೆಯೇ ನಡೆಯದಂತೆ ಮಾಡಿದ್ದ! ಇಂತಹ ಫಟಿಂಗತನವನ್ನು ಆತ ಮಾಡಿರಬಹುದು. ಆದರೆ ಸನ್ನಿಗೆ ದೇಶದ ಬಗ್ಗೆ ಅಪಾರ ಕಾಳಜಿ ಇದೆ. ೨೦೦೮ನೇ ಸಾಲಿನಲ್ಲಿ ಗುಜರಾತ್‌ನ ‘ನಿರ್ಮಾ’ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದು ಹೊರಬಂದಿರುವ ಸನ್ನಿಗೆ ಭಾರೀ ಸಂಬಳ-ಸವಲತ್ತನ್ನು ನೀಡುವ ಹಲವಾರು ಉದ್ಯೋಗಗಳು ತಾವಾಗಿಯೇ ಅರಸಿಕೊಂಡು ಬಂದಿದ್ದವು. ಆದರೆ ಆತನಿಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ಆ ಆಸೆ ಈಡೇರದಿದ್ದರೇನಂತೆ, ಅಹಮದಾಬಾದಿನಲ್ಲಿ “ಸೈಬರ್ ಕ್ರೈಮ್ ಸೆಲ್” ಸ್ಥಾಪನೆ ಮಾಡಿರುವ ಆತ, ಸೈಬರ್ ಕಳ್ಳರನ್ನು ಹುಡುಕಿ ಕೊಡುತ್ತಿದ್ದಾನೆ. ಅಮೆರಿಕ ಮೂಲದ ಐಟಿ ಕಂಪನಿ ‘ನೋಬೆಲ್ ವೆಂಚರ್‍ಸ್’ನಲ್ಲಿ ನಡೆದ ಅತಿದೊಡ್ಡ ಡೇಟಾ ಕಳವು ಪ್ರಕರಣದ ರೂವಾರಿಯನ್ನು ಪತ್ತೆಹಚ್ಚಿದ ಸನ್ನಿ, ‘ಇ-ಬೇ’ ಕ್ರೆಡಿಟ್ ಕಾರ್ಡ್ ಮೋಸ, ಖೊಟ್ಟಿ ಎಸ್ಸೆಮ್ಮೆಸ್ ಪ್ರಕರಣ, ಉದ್ಯಮ ವಲಯದಲ್ಲಿನ ಕಡತಗಳ ಕಳ್ಳತನ, ಆರ್ಕಟ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸುವುದು ಮುಂತಾದ ೧೬ ಸೈಬರ್ ಅಪರಾಧಗಳನ್ನು ಇದುವರೆಗೂ ಶೋಧಿಸಿದ್ದಾನೆ. ಟೆಕ್ ಹ್ಯಾಕಿಂಗ್, ಮೊಬೈಲ್ ಸೆಕ್ಯುರಿಟಿ, ವೆಬ್ ಸೆಕ್ಯುರಿಟಿ, ಸೈಬರ್ ಫಾರೆನ್ಸಿಕ್ಸ್ ಮುಂತಾದ ವಿಷಯಗಳ ಕುರಿತು ದೇಶಾದ್ಯಂತ ೩೦ ಉಪನ್ಯಾಸಗಳನ್ನು ನೀಡಿದ್ದಾನೆ. ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್ ಹಾಗೂ ಮುಂಬೈ ಭಯೋತ್ಪಾದನಾ ನಿಗ್ರಹ ದಳಗಳಿಗೆ ಸಹಾಯ ನೀಡುತ್ತಿರುವ ಆತ, ಮೊಹಮದ್ ಪೀರ್‌ಭಾಯ್‌ನಂತಹ ಪ್ರಚಂಡ ದೇಶದ್ರೋಹಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಹಾಗಾಗಿ ಆತನ ಜೀವಕ್ಕೂ ಅಪಾಯ ಎದುರಾಗಿದೆ. ಆತ ಮಾಡುತ್ತಿರುವ ಕೆಲಸದ ಬಗ್ಗೆ ಕುಟುಂಬ ವರ್ಗಕ್ಕೆ ತೀವ್ರ ಅಸಮಾಧಾನವಿದೆ. ಆದರೆ ಸನ್ನಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ಗೆ ತನ್ನೆಲ್ಲಾ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದಾನೆ, ಜೀವ ಬೆದರಿಕೆಯನ್ನೂ ಲೆಕ್ಕಿಸದೆ ಉಗ್ರರ ಜಾಲವನ್ನು ಪತ್ತೆ ಹಚ್ಚಿ ನಾಶಪಡಿಸಲು ಸಹಾಯ ಮಾಡುತ್ತಿದ್ದಾನೆ. ಆತನ ಸೇವೆಯನ್ನು ಗುರುತಿಸಿ ‘ರಾಜೀವ್ ಗಾಂಧಿ ಯುವ ಸಾಧಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಮುಸ್ಲಿಮ್ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಅನಕ್ಷರತೆ ಮತ್ತು ನಿರುದ್ಯೋಗವೇ ಕಾರಣ ಎಂದು ಹಿಂದೆಲ್ಲಾ ಸಬೂಬು ಹೇಳುತ್ತಿದ್ದರು. ಅನರಕ್ಷತೆ ಮತ್ತು ನಿರುದ್ಯೋಗವೆಂಬುದು ಮುಸ್ಲಿಮರನ್ನು ಮಾತ್ರ ಕಾಡುತ್ತಿದೆ ಎಂಬಂತೆ ಬೊಬ್ಬೆ ಹಾಕುತ್ತಿದ್ದರು. ಬಡತನ ಮತ್ತು ಅನಕ್ಷರತೆಗಳು ಭಯೋತ್ಪಾದನೆಗೆ ಕಾರಣ ಎನ್ನುವುದಾದರೆ ಬಡತನರೇಖೆಗಿಂತ ಕೆಳಗಿರುವ ಈ ದೇಶದ ಶೇ. ೩೦ರಷ್ಟು ಭಾರತೀಯರೂ ಭಯೋತ್ಪಾದಕರಾಗಿರಬೇಕಿತ್ತು ಎಂಬ ಕನಿಷ್ಠ eನವೂ ಇಲ್ಲದವರಂತೆ ಮುಸ್ಲಿಮ್ ಭಯೋತ್ಪಾದಕರನ್ನು ಸಮರ್ಥನೆ ಮಾಡುತ್ತಿದ್ದರು. ಆದರೆ ಈಗ ಸತ್ಯ ಬೆತ್ತಲಾಗಿ ನಿಂತಿದೆ. ಇಂದು ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುತ್ತಿರುವ ಮುಸ್ಲಿಮ್ ಯುವಕರು ಬಡವರೂ ಅಲ್ಲ, ಅನಕ್ಷರಸ್ಥರೂ ಅಲ್ಲ. ‘ಇಂಡಿಯನ್ ಮುಜಾಹಿದೀನ್’ನ ಮಾಧ್ಯಮ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದ ಪುಣೆಯ ಮೊಹಮದ್ ಅಸ್ಗರ್ ಪೀರ್ ಭಾಯ್ ‘ಯಾಹೂ ಇನ್‌ಕಾರ್ಪೊರೇಟೆಡ್’ನ ಉದ್ಯೋಗಿ ಯಾಗಿದ್ದ. ವರ್ಷಕ್ಕೆ ೧೯ ಲಕ್ಷ ಸಂಬಳ ಎಣಿಸುತ್ತಿದ್ದ. ಆತನಿಗೆ ಸಹಾಯ ನೀಡುತ್ತಿದ್ದ ಮುಬಿನ್ ಖಾದರ್ ಶೇಕ್ ಕೂಡ ಸಾಫ್ಟ್‌ವೇರ್ ಎಂಜಿನಿಯರ್. ಶ್ರೀಮಂತ ಕುಟುಂಬ ದಿಂದಲೇ ಬಂದವನಾಗಿದ್ದಾನೆ. ಹೀಗೆ ಧರ್ಮದ ಹೆಸರಿನಲ್ಲಿ ಅನ್ನ ನೀಡುತ್ತಿರುವ, ವಿದ್ಯಾದಾನ ಮಾಡಿದ ದೇಶವನ್ನೇ ನಾಶ ಮಾಡಲು ಹೊರಟಿರುವ ಕೃತಘ್ನರು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂಬಳ-ಸವಲತ್ತಿನ ಆಸೆ ಬಿಟ್ಟು, ಅಪಾಯವನ್ನು ಮೈಮೇಲೆ ಎಳೆದುಕೊಂಡು ಪೊಲೀಸರಿಗೆ ಸಹಾಯ ನೀಡುತ್ತಿರುವ ಸನ್ನಿ ವಾಘೇಲಾನ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತದೆ ಅಲ್ಲವೆ?

Thursday, June 25, 2009

CyberCrime

ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿರುವ ಸೈಬರ್ ಕ್ರೈಂ

ಮನುಷ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ಜನಸಾಮಾನ್ಯರಿಗೆ ಅರ್ಥವಾಗದ, ಕಾನೂನಿನ ಚೌಕಟ್ಟಿಗೂ ಬಾರದಿರುವ ಅನೇಕ ಅಪರಾಧಗಳು ಹೆಚ್ಚುತ್ತಿವೆ. ಅಂಥವುಗಳಲ್ಲಿ ಸೈಬರ್ ಅಪರಾಧವೂ ಒಂದು. ಸೈಬರ್ ಅಪರಾಧವನ್ನು ಕಟ್ಟಿಹಾಕಲು ಭಾರತ ಮಾಹಿತಿ ತಂತ್ರಜ್ಞಾನ ಅಧಿನಿಯಮ 2000 ಜಾರಿತಂದಿದೆ. ಈ ಕಾನೂನಿನಿಂದ ಸೈಬರ್ ಕ್ರೈಮನ್ನು ನಿಗ್ರಹಿಸುವಲ್ಲಿ ಎಷ್ಟು ಸಫಲತೆ ದಕ್ಕಿದೆ? ಜನಸಾಮಾನ್ಯರಿಗೆ ಈ ಅಪರಾಧದ ಬಗ್ಗೆ ತಿಳಿವಳಿಕೆಯಾದರೂ ಎಷ್ಟಿದೆ? ಸೈಬರ್ ಅಪರಾಧ ವಿಷಯದಲ್ಲಿ ಪರಿಣತಿ ಹೊಂದಿರುವ ನ್ಯಾಯವಾದಿ ಪ್ರಶಾಂತ್ ಮಿರ್ಲೆ ಈ ನೂತನ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ. ಸೈಬರ್ ಅಪರಾಧ ಕುರಿತಂತೆ ಮಿರ್ಲೆ ಅವರೊಂದಿಗೆ ಓದುಗರು ಸಂವಾದಿಸಬಹುದು. - ಸಂಪಾದಕ.

ಮನುಷ್ಯ ತನ್ನ ಚಟುವಟಿಕೆಗಳಿಂದ ಎಲ್ಲಿಯವರೆಗೆ ಯಶಸ್ಸನ್ನು ಕಾಣುತ್ತಾ ಇರುತ್ತಾನೋ ಅಲ್ಲಿಯವರೆಗೆ ಅಪರಾಧಗಳು ಹೆಚ್ಚುತ್ತಲೇ ಇರುತ್ತವೆ. ಅಂತಯೇ, ಈ ಅಪರಾಧಗಳನ್ನು ನಿಯಂತ್ರಿಸುವ ಕೆಲಸ ಆಗಿಂದಾಗ್ಗೆ ಮಾಡುತ್ತಲೇ ಇರಬೇಕಾಗುತ್ತದೆ. ಇದಕ್ಕಾಗಿ ಕಾನೂನು ರಚನಾ ಇಲಾಖೆಗಳನ್ನು ಬಲಪಡಿಸಬೇಕಾಗುತ್ತದೆ ಮತ್ತು ಅಪರಾಧಗಳನ್ನು ಹಿಮ್ಮೆಟ್ಟಿಸಬೇಕಾಗುತ್ತದೆ. 1990ರ ಪೂರ್ವದಲ್ಲಿ ಸೈಬರ್ ಸ್ವೇಸನ್ನು ಸುಮಾರು ಒಂದು ಲಕ್ಷ ಜನರು ಬಳಸುತ್ತಿದ್ದರು. ಇಂದು 500 ಮಿಲಿಯನ್‌ಗಿಂತ ಹೆಚ್ಚು ಜನರು ಪ್ರಪಂಚದ ನಾನಾ ಭಾಗಗಳಿಂದ ಬಳಸುತ್ತಿದ್ದು ಒಂದು ರೀತಿ ಅನೈತಿಕ, ದಿವಾನಿ ಮತ್ತು ಅಪರಾಧಿಕ ತಪ್ಪುಗಳನ್ನು ಎಸಗುವ ತಾಣವಾಗಿರುತ್ತದೆ.

ಮಾಹಿತಿ ತಂತ್ರಜ್ಞಾನದ ವೃತ್ತಿಪರರಿಗೆ (ಸಾರ್ವಜನಿಕರಿಗೂ ಸಹ) ಸೈಬರ್ ಅಪರಾಧದ ಬಗ್ಗೆ ಯಾವಾಗ ಪೋಲಿಸರಿಗೆ ಮಾಹಿತಿಯನ್ನು ಕೊಡಬೇಕು ಅಥವಾ ಎಂತಹ ಮಾಹಿತಿಯನ್ನು ಒದಗಿಸಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕಾಗಿರುವುದು ಇಂದು ಅತಿ ಜರೂರಾಗಿದೆ. ಅಂತೆಯೇ, ಕಾನೂನು ರಚನೆಕಾರರು ಕೆಲವು ನಿರ್ದಿಷ್ಟ ಅಪರಾಧಗಳಿಗೆ ಶಿಕ್ಷಿಸಲು ಅವುಗಳನ್ನು ಕಾನೂನಿನಡಿಯಲ್ಲಿ ತರುವ ಅಗತ್ಯವಿದೆ. ವಾಸ್ತವವಾಗಿ ಕೆಲವು ಸೈಬರ್ ಅಪರಾಧಗಳು ಇನ್ನೂ ಕಾನೂನು ಪರಿಧಿಯಿಂದ ಹೊರಗುಳಿದಿದ್ದು ಸಮಾಜಕ್ಕೆ ಮಾರಕವಾಗಿವೆ.

ಪ್ರಾಥಮಿಕವಾಗಿ ಸೈಬರ್ ಅಪರಾಧ ಕುರಿತಂತೆ ಅಂತಾರಾಷ್ಟ್ರೀಯ ವ್ಯಾಪಾರ ಕಾನೂನಿನ ಸಂಯುಕ್ತ ರಾಷ್ಟ್ರಗಳ ಆಯೋಗವು ಅಂಗೀಕರಿಸಿದ ವಿದ್ಯುನ್ಮಾನ ವಾಣಿಜ್ಯ (ಇ-ಕಾಮರ್ಸ್) ಮಾದರಿ ಕಾನೂನಿನ ಅನ್ವಯ ಭಾರತವು ಮಾಹಿತಿ ತಂತ್ರಜ್ಞಾನ ಅಧಿನಿಯಮವನ್ನು 2000ನೇ ಇಸವಿಯಲ್ಲಿ ಜಾರಿಗೆ ತಂದಿದೆ. ಕಾನೂನು ಏಕರೂಪವಾಗಿರಬೇಕೆಂಬ ದೃಷ್ಟಿಯಿಂದ ಎಲ್ಲ ರಾಷ್ಟ್ರಗಳು ತಮ್ಮ ಕಾನೂನುಗಳನ್ನು ಅಧಿನಿಯಮಿಸುವಾಗ ಅಥವಾ ಅವುಗಳನ್ನು ಪರಿಷ್ಕರಿಸುವಾಗ ಸದರಿ ಮಾದರಿ ಕಾನೂನಿಗೆ ಅನುಕೂಲಕರ ಪರಿಗಣನೆ ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಭಾರತ ಸೈಬರ್ ಆಪರಾಧ ಮತ್ತು ಅವುಗಳ ನಿರ್ದಿಷ್ಟ ಪ್ರಕಾರಗಳನ್ನು ಸಂಘಟಿಸಿ ದಂಡನಾರ್ಹಗೊಳಿಸಿದೆ. ವಿದ್ಯುನ್ಮಾನ ದತ್ತಾಂಶದ ಪರಸ್ಪರ ವಿನಿಮಯ ಮತ್ತು ಇತರ ವಿದ್ಯುನ್ಮಾನ ಸಂವಹನದ ಮೂಲಕ ನಿರ್ವಹಿಸುವ ವಹಿವಾಟುಗಳಿಗೆ ಕಾನೂನಿನ ಮಾನ್ಯತೆಯನ್ನು ನೀಡಲಾಯಿತು ಮತ್ತು ಇದಕ್ಕೆ ಪೂರಕವಾಗಿ ಭಾರತ ದಂಡ ಸಂಹಿತೆ, 1860, ಭಾರತ ಸಾಕ್ಷ್ಯ ಅಧಿನಿಯಮ, 1872, ಬ್ಯಾಂಕರುಗಳ ಪುಸ್ತಕ ಸಾಕ್ಷ್ಯ ಅಧಿನಿಯಮ, 1891 ಮತ್ತು ಭಾರತದ ರಿಸರ್ವ್ ಬ್ಯಾಂಕ್ ಅಧಿನಿಯಮ, 1934 - ಸೂಕ್ತ ತಿದ್ದುಪಡಿ ಮಾಡಲಾಗಿದೆ.

ಸೈಬರ್ ಅಪರಾಧಗಳು

ಸೈಬರ್ ಅಪರಾಧಕ್ಕೆ ಮೂಲ ಕಂಪ್ಯೂಟರ್ ಮತ್ತು ಅದರ ಸಂಪನ್ಮೂಲಗಳು. ಅಪರಾಧಿಗಳು ಇಂಟರ್ನೆಟ್ ಸಂಪರ್ಕ ಪಡೆದು ಇತರರಿಗೆ ಕಂಪ್ಯೂಟರ್ ಬಳಕೆಯನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ವೈರಸ್ ಹರಡಿ ಇಡಿ ಸಂಪರ್ಕಗಳನ್ನೇ ನಾಶ ಮಾಡುತ್ತಿದ್ದಾರೆ. ಇಷ್ಟಲ್ಲದೆ, ವಿವಿಧ ರೀತಿಯಲ್ಲಿ ಅಂದರೆ, ದುರುದ್ದೇಶವುಳ್ಳ ಸಾಪ್ಟ್‌ವೇರ್‌ಗಳು(malware), ಸ್ಪ್ಯಾಮ್‌ಗಳು/ ಜಾಹಿರಾತು ಮಾದರಿಗಳು(bots), ವೈಯಕ್ತಿಕ ಮಾಹಿತಿಗಳುಳ್ಳ ಕ್ರೆಡಿಟ್ ಕಾರ್ಡ್‌ಗಳ ಅಥವಾ ಡೇಟಾಗಳನ್ನು ನಕಲಿಕರಿಸಿಕೊಳ್ಳುವುದು (phishing) ಮತ್ತು ಇನ್ನೊಬ್ಬರ ಬಗ್ಗೆ ತಪ್ಪು ಭಾವನೆ ಬರುವಂತೆ ಮಾಡುವುದು (spoofing), ಬೆದರಿಕೆಯ ಮೂಲಕ ಭಯೋತ್ವಾದನೆ ಉಂಟುಮಾಡುವುದು, ಹೀಗೆ ಹಲವು ರೂಪದಲ್ಲಿ ಜನ್ಮ ಪಡೆದುಕೊಳ್ಳುತ್ತಲೇ ಇರುತ್ತವೆ.

ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಕೆಲ ಉದಾಹರಣೆಗಳನ್ನು ನೋಡೋಣ.

ಅ. ಇಂದು ಮೋಸದ ಇ-ಮೇಲ್‌ಗಳಿಂದ ಬಾಧಿಸುವುದು ಅದರಲ್ಲೂ ಮುಖ್ಯವಾಗಿ ಹಣ ಹೊಂದುವ ಆಸೆಯಿಂದ ಹೊಸ-ಹೊಸ ಮಾದರಿಯಲ್ಲಿ ಇ-ಮೇಲ್ ಮುಖಾಂತರ ಆಕರ್ಷಕ ಚಿತ್ರಗಳನ್ನು ಕಳುಹಿಸುತ್ತಾರೆ, ಒಂದು ವೇಳೆ ಈ ಚಿತ್ರದ ಮೇಲೆ ಬಟನ್ ಒತ್ತಿದರೆ ವೈರಸ್ಸನ್ನು ಆಹ್ವಾನಿಸಿ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿದಂತೆ (ಇನ್ಸ್‌ಟಾಲ್) ನಂತರ ಇದು ನಿಮ್ಮ ಇತರೇ ಫೈಲ್‌ಗಳನ್ನು ಸ್ವಯಂಚಾಲಿತವಾಗಿ ಮುಚ್ಚುತ್ತದೆ (ಅನ್‌ಲಾಕ್) ಇದನ್ನು ಪುನಃ ತೆರೆಯಬೇಕೆಂದರೆ ಹಣ ಪಾವತಿಸುವಂತೆ ನಿರ್ದೇಶಿಸುತ್ತದೆ. ಸೂಕ್ತ ತಿಳಿವಳಿಕೆ ಇಲ್ಲದೇ ಅಂತರ್ಜಾಲದ ಅಥವಾ ಇಂಟರ್‌ನೆಟ್‌ನ್ನು ರಕ್ಷಣಾತ್ಮಕವಾಗಿ ಬಳಸದೇ ಇದ್ದ ಕಾರಣ ಇಂತಹ ಮೋಸಕ್ಕೆ ಭಾರತದಲ್ಲಿ ಹಲವುಮಂದಿ ಹಣ ವ್ಯಯಿಸಿರುವ ಪ್ರಕರಣಗಳಿವೆ.

ಆ. ಸಾಮಾನ್ಯವಾಗಿ ಬ್ಯಾಂಕುಗಳ ಹೆಸರಿನಿಂದ ವೈಯಕ್ತಿಕ ಮಾಹಿತಿಗಳನ್ನು ಕೇಳುವ ಇ-ಮೇಲ್‌ಗಳು ನಮ್ಮ ಭಾರತದಲ್ಲಿ ಹೆಚ್ಚು. ಇವುಗಳಲ್ಲಿ ಹೆಚ್ಚು ನಕಲಿ ಮತ್ತು ನ್ಯಾಯಬದ್ದವಾದ ಬ್ಯಾಂಕುಗಳು ಯಾವಾಗಲೂ ವೈಯಕ್ತಿಕ ಮಾಹಿತಿಯನ್ನು ಮೇಲ್ ಮುಖಾಂತರ ಕೇಳುವುದಿಲ್ಲ. ಇದರ ಅವಶ್ಯಕತೆ ಇದ್ದರೆ ಲಿಖಿತವಾಗಿ ಅಥವಾ ಸಾಮಾನ್ಯವಾಗಿ ದೂರವಾಣಿಯ ಮುಖಾಂತರ ಸಂಪರ್ಕಿಸುವುದುಂಟು. ಆದ್ದರಿಂದ ಇನ್ನೂ ಮುಂದೆ ಇಂತಹ ಮೇಲ್‌ಗಳು ನಿಮಗೆ ಬಂದರೆ ಅದನ್ನು ತೆರೆಯುವುದಕ್ಕಿಂತ ಮುಂಚೆ ಸಂಬಂಧಪಟ್ಟ ಬ್ಯಾಂಕುಗಳನ್ನು ಸಂಪರ್ಕಿಸಿ ಖಾತ್ರಿಪಡಿಸಿಕೊಳ್ಳುವುದು ಒಳಿತು.

ಇ. ಇತ್ತೀಚಿನ ಪ್ರಕರಣವೊಂದರಲ್ಲಿ, ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಬೇರೆ ಕುಟುಂಬದ ಸದಸ್ಯರ ನಗ್ನ ಚಿತ್ರಗಳನ್ನು ತಮ್ಮ ವೆಬ್ ತಾಣದಲ್ಲಿ ಬಿತ್ತರಿಸುತ್ತಿರುವುದು ಸಾಬೀತಾಗಿ ಕೇರಳದ ಚರ್ಚಿನಲ್ಲಿ ಧರ್ಮೋಪದೇಶ ಮಾಡುತ್ತಿದ್ದ ಪ್ರವಚಕ ಮತ್ತು ಆತನ ಮಗನಿಗೆ ಒಂದು ವರ್ಷ ಸಜೆ ವಿಧಿಸಿ, ಹತ್ತು ಸಾವಿರ ರೂಪಾಯಿಗಳ ದಂಡ ಪಾವತಿಸುವಂತೆ ಆದೇಶಿಸಿರುತ್ತದೆ.

ಸದರಿ ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 43ರಲ್ಲಿ ತಿಳಿಸಿರುವಂತೆ ಕಂಪ್ಯೂಟರ್ ವ್ಯವಸ್ಥೆಗೆ ಹಾನಿಯುಂಟು ಮಾಡಿದಾಗ, ಅದು ಆ ಕಂಪ್ಯೂಟರ್ ಒಡೆಯನ ಅಥವಾ ಅದರ ಪ್ರಭಾರ ಹೊಂದಿರುವ ಯಾರೇ ಆಗಲಿ, ಇತರ ವ್ಯಕ್ತಿಯ ಅನುಮತಿಯಿಲ್ಲದೆ ಮಾಡುವ ಈ ಕೆಳಕಂಡ ಕೃತ್ಯಗಳಿಗೆ ಬಾಧಿತನಾದ ವ್ಯಕ್ತಿಗೆ ಆದ ನಷ್ಟವನ್ನು ಪರಿಹಾರ ರೂಪದಲ್ಲಿ ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದ್ದು. ಅಲ್ಲದೆ ಕಲಮು 66ರ ಮೇರೆಗೆ ಮೂರು ವರ್ಷಗಳವರೆಗಿನ ಕಾರಾಗೃಹವಾಸದಿಂದ ಅಥವಾ ಎರಡು ಲಕ್ಷ ರೂಪಾಯಿವರೆಗಿನ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಬೇಕಾಗುತ್ತದೆ, ಅವು ಇಂತಿವೆ:

(ಎ) ಅಂಥ ಕಂಪ್ಯೂಟರ್‌ಗೆ, ಅದರ ವ್ಯವಸ್ಥೆಗೆ ಅಥವಾ ಕಂಪ್ಯೂಟರ್ ಜಾಲವನ್ನು ಪ್ರವೇಶಿಸಿದರೆ ಅಥವಾ ಪ್ರವೇಶ ದೊರಕಿಸಿಕೊಂಡರೆ;
(ಬಿ) ತೆಗೆಯಬಹುದಾದ ಯಾವುದೇ ಸಂಗ್ರಹಣಾ ಮಾಧ್ಯಮದಲ್ಲಿ ಇರುವ ಅಥವಾ ಸಂಗ್ರಹಿಸಿರುವ ಮಾಹಿತಿ ಅಥವಾ ದತ್ತಾಂಶವೂ ಒಳಗೊಂಡಂತೆ ಅಂಥ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಿಂದ ಯಾವುದೇ ದತ್ತಾಂಶವನ್ನು (ಡೇಟಾ) ಕಂಪ್ಯೂಟರ್ ದತ್ತಾಂಶ ಸಂಗ್ರಹಣವನ್ನು ಅಥವಾ ಮಾಹಿತಿಯ ಭಾರ ಕುಗ್ಗಿಸಿದರೆ, ಪ್ರತಿ ತೆಗೆದರೆ ಅಥವಾ ಉದ್ಧೃತ ಭಾಗಗಳನ್ನು ತೆಗೆದುಕೊಂಡರೆ;
(ಸಿ) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಲ್ಲಿ ಯಾವುದೇ ಕಂಪ್ಯೂಟರ್ ಕಲ್ಮಶಕಾರಕವನ್ನು ಅಥವಾ ಕಂಪ್ಯೂಟರ್ ವೈರಸನ್ನು ಸೇರಿಸಿದರೆ ಅಥವಾ ಸೇರುವಂತೆ ಮಾಡಿದರೆ;
(ಡಿ) ಯಾವುದೇ ಕಂಪ್ಯೂಟರ್‌ನ್ನು, ಕಂಪ್ಯೂಟರ್ ವ್ಯವಸ್ಥೆಯನ್ನು ಅಥವಾ ಕಂಪ್ಯೂಟರ್ ಜಾಲವನ್ನು, ದತ್ತಾಂಶವನ್ನು, ಕಂಪ್ಯೂಟರ್ ದತ್ತಾಂಶ ಸಂಗ್ರಹವನ್ನು ಅಥವಾ ಅಂಥ ಕಂಪ್ಯೂಟರ್‌ನಲ್ಲಿ, ಕಂಪ್ಯೂಟರ್ ವ್ಯವಸ್ಥೆಯಲ್ಲಿ ಅಥವಾ ಕಂಪ್ಯೂಟರ್ ಜಾಲದಲ್ಲಿರುವ ಯಾವುದೇ ಇತರ ಕಾರ್ಯಸರಣಿಯನ್ನು ಹಾನಿಗೊಳಿಸಿದರೆ ಅಥವಾ ಅದಕ್ಕೆ ಹಾನಿಯಾಗುವಂತೆ ಮಾಡಿದರೆ;
(ಇ) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲವನ್ನು ಭಂಗಗೊಳಿಸಿದರೆ ಅಥವಾ ಭಂಗಗೊಳಿಸುವಂತೆ ಮಾಡಿದರೆ;
(ಎಫ್) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲಕ್ಕೆ ಪ್ರವೇಶ ಪಡೆಯಲು ಅಧಿಕೃತನಾದ ಯಾರೇ ವ್ಯಕ್ತಿಗೆ ಯಾವುದೇ ಉಪಾಯದಿಂದ ಪ್ರವೇಶವನ್ನು ನಿರಾಕರಿಸಿದರೆ ಅಥವಾ ನಿರಾಕರಿಸುವಂತೆ ಮಾಡಿದರೆ;
(ಜಿ) ಈ ಅಧಿನಿಯಮದ ಮೇರೆಗೆ ಮಾಡಲಾದ ನಿಯಮಗಳ ಅಥವಾ ವಿನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿ, ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲಕ್ಕೆ ಯಾರೇ ವ್ಯಕ್ತಿಯು ಪ್ರವೇಶ ಪಡೆಯಲು ಅನುಕೂಲವಾಗುವ ಹಾಗೆ ಅವನಿಗೆ ನೆರವು ನೀಡಿದರೆ;
(ಎಚ್) ಯಾವುದೇ ಕಂಪ್ಯೂಟರ್, ಕಂಪ್ಯೂಟರ್ ವ್ಯವಸ್ಥೆ ಅಥವಾ ಕಂಪ್ಯೂಟರ್ ಜಾಲದಲ್ಲಿ ಹಸ್ತಕ್ಷೇಪ ಮಾಡಿ, ತಿದ್ದಿ ಅಥವಾ ಕೈವಾಡ ತೋರಿಸುವ ಮೂಲಕ ಒಬ್ಬ ವ್ಯಕ್ತಿಯು ಪಡೆದ ಸೇವೆಗಳ ವೆಚ್ಚವನ್ನು ಇನ್ನೊಬ್ಬ ವ್ಯಕ್ತಿಯ ಲೆಕ್ಕಕ್ಕೆ ತೋರಿಸುವಂತೆ ಮಾಡಿದರೆ.

ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಅಧಿನಿಯಮ, 2008ರ ಕಲಮು 65ರ ಮೇರೆಗೆ ಯಾವುದೇ ಕಂಪ್ಯೂಟರ್‌ನ ಮೂಲ ದಸ್ತಾವೇಜುಗಳನ್ನು ಅಥವಾ ಕಂಪ್ಯೂಟರ್ ಕಾರ್ಯಸರಣಿಯ ಅಥವಾ ಕಂಪ್ಯೂಟರ್‌ನ ಕಾರ್ಯ ವ್ಯವಸ್ಥೆಯ ಅಥವಾ ಕಂಪ್ಯೂಟರ್ ಜಾಲದ ಸಲುವಾಗಿ ಬಳಸುವ ಯಾವುದೇ ಕಂಪ್ಯೂಟರ್‌ನ ಮೂಲ ಸಂಕೇತಗಳು ಅಥವಾ ಆಜ್ಞೆಗಳು ಅಥವಾ ವಿನ್ಯಾಸಗಳು ಮತ್ತು ನಿರ್ದಿಷ್ಟ ರೂಪುರೇಷೆಗಳನ್ನು ಯಾರಾದರೂ ಗೊತ್ತಿದ್ದೂ ಅಥವಾ ಉದ್ದೇಶಪೂರ್ವಕವಾಗಿ ಬಚ್ಚಿಟ್ಟರೆ, ನಾಶಗೊಳಿಸಿದರೆ ಅಥವಾ ವ್ಯತ್ಯಾಸಗೊಳಿಸಿದರೆ, ಅಥವಾ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದೂ ಬಚ್ಚಿಡುವುದಕ್ಕೆ, ನಾಶ ಮಾಡುವುದಕ್ಕೆ ಅಥವಾ ವ್ಯತ್ಯಾಸಗೊಳಿಸುವುದಕ್ಕೆ ಇನ್ನೊಬ್ಬರನ್ನು ಪ್ರೇರೇಪಿಸಿದರೆ, ಅವನು ಮೂರು ವರ್ಷಗಳವರೆಗಿನ ಕಾರಾವಾಸದಿಂದ ಅಥವಾ ಎರಡು ಲಕ್ಷ ರೂಪಾಯಿವರೆಗಿನ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಬೇಕಾಗುತ್ತದೆ.ಇನ್ನೂ ಮುಂದುವರೆದು ಕಲಮು 66ರಲ್ಲಿ ಹಲವು ಸೈಬರ್ ಅಪರಾಧಗಳನ್ನು ಗುರುತಿಸಿ ಅವುಗಳಿಗೆ ಶಿಕ್ಷೆ ಮತ್ತು ಜುಲ್ಮಾನೆಯ ಪ್ರಮಾಣಗಳನ್ನು ನಿಗದಿಪಡಿಸಿರುತ್ತದೆ, ಈ ಕೆಳಗಿನವುಗಳು ಪ್ರಸ್ತುತದಲ್ಲಿ ಗುರುತಿಸಿರುವ ಅಪರಾಧಗಳು:1. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಗೆ ಅಕ್ರಮ ಸಂದೇಶವನ್ನು ತಲುಪಿಸುವುದು. 2. ಕಳವು ಮಾಡಿರುವ ಕಂಪ್ಯೂಟರ್‌ನ ಮೂಲ ಸಂಪತ್ತನ್ನು ಅಥವಾ ಸಂಪರ್ಕ ಮಾಧ್ಯಮವನ್ನು ತನ್ನ ವಶದಲ್ಲಿ ಹೊಂದಿರುವುದು. ಇದರಿಂದ ಲ್ಯಾಪ್‌ಟಾಪ್ ಕಳವು ಸಹಾ ಸೈಬರ್ ಅಪರಾಧವಾಗಿ ಪರಿಗಣಿಸಲಾಗುತ್ತದೆ. 3. ವೈಯಕ್ತಿಕ ಮಾಹಿತಿಗಳಾದ ವಿದ್ಯುನ್ಮಾನ ದಾಖಲೆಗಳಾದ ಅಂಕಿಚಿಹ್ನೆಯ(ಡಿಜಿಟಲ್ ಸಿಗ್ನೆಚರ್), ಗೌಪ್ಯ ಪದಗಳನ್ನು ಅಥವಾ ಯೂನಿಕ್ ಐಡೆಂಟಿಟಿ ನಂಬರ್‌ಗಳನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸಿ ಕೊಳ್ಳುವುದು.4. ಪರರೂಪಧಾರಣೆಯ ಮೂಲಕ ಕಂಪ್ಯೂಟರ್ ಸಂಪನ್ಮೂಲಗಳಿಂದ ಯಾರೇ ವ್ಯಕ್ತಿಗಳಿಗೆ ಮೋಸ ಮಾಡುವುದು.5. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳ ಗೌಪ್ಯತೆಯನ್ನು ಬಯಲು ಮಾಡುವುದು.6. ಕಂಪ್ಯೂಟರ್‌ನ ಅಥವಾ ಸಂಪರ್ಕ ಮಾಧ್ಯಮದ ಮೂಲಕ ಭಯೋತ್ವಾದನೆ ಉಂಟುಮಾಡುವುದು (ಇತ್ತೀಚಿನ ಉಗ್ರಗಾಮಿಗಳ ಭಯೋತ್ವಾದನ ಕೃತ್ಯಗಳ ಬಳಕೆಗೆ ಸೈಬರ್ ಸ್ಪೇಸ್ ಸೂಕ್ತ ತಾಣವಾಗಿರುದನ್ನು ತಡೆಯುವುದೆ ಇದರ ಉದ್ದೇಶ).7. ವಿದ್ಯುನ್ಮಾನ ನಮೂನೆಯಲ್ಲಿ ಅಶ್ಲೀಲವಾದ ಮಾಹಿತಿಯನ್ನು ಪ್ರಕಟಿಸುವುದು.8. ಅಶ್ಲೀಲ ಮಾಹಿತಿಯ ರವಾನೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಮತ್ತು ಭಾಗಿಯಾಗುವುದಕ್ಕೆ ಸಹಕರಿಸುವುದು.ಇಷ್ಟಲ್ಲದೆ ಈ ಅಧಿನಿಯಮದ ಮೇರೆಗೆ ರಚಿಸಲಾದ ಯಾವ ನಿಯಮಗಳ ಅಥವಾ ವಿನಿಮಯಗಳ ಉಲ್ಲಂಘನೆಗಾಗಿ ಪ್ರತ್ಯೇಕವಾಗಿ ಯಾವುದೇ ದಂಡನೆಯನ್ನು ಉಪಬಂಧಿಸಿದಿದ್ದರೆ ಅಂಥ ಯಾವುವೇ ನಿಯಮಗಳನ್ನು ಅಥವಾ ವಿನಿಮಯಗಳನ್ನು ಯಾರಾದರೂ ಉಲ್ಲಂಘಿಸಿದರೆ, ಅವನು ಅಂಥ ಉಲ್ಲಂಘನೆಯಿಂದ ಬಾಧಿತನಾದ ವ್ಯಕ್ತಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ನಷ್ಟ ಪರಿಹಾರವನ್ನು ಸಂದಾಯ ಮಾಡಲು ಅಥವಾ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಮೀರದಷ್ಟು ದಂಡನೆಗೆ ಗುರಿಯಾಗಲು ಬದ್ಧನಾಗತಕ್ಕದ್ದು.ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳು:
ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಇತರೇ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಕಂಪ್ಯೂಟರ್‌ಗಳ ಬಳಕೆ ಹೆಚ್ಚುತ್ತಿದ್ದು ಇಂದು ಇಂಟರ್‌ನೆಟ್ ಏಕಮಾತ್ರ, ಶ್ರೀಮಂತಿಕೆಯ ಮತ್ತು ಮಾಹಿತಿಗಳ ಸಂಪನ್ಮೂಲಗಳ ಆಧಾರವಾಗಿದ್ದು, ಯಾವುದೇ ಮಾಹಿತಿಗಳನ್ನು ಪಡೆಯಲು ಸಹಕಾರಿಯಾಗಿ ಎಲ್ಲರ ಯೋಚನೆಗೆ ನಿಲುಕುವುದಾಗಿರುತ್ತದೆ. ಅಂತೆಯೇ ಅಪರಾಧಿಗಳಿಗೆ ಸ್ವರ್ಗತಾಣವು ಆಗಿರುತ್ತದೆ ಮತ್ತು ಇದರಿಂದ ಸೃಜಿಸಬಹುದಾದ ಅಪರಾಧಗಳ ಬಗೆಗೆ ತೊಂದರೆಗೀಡಾದ ವ್ಯಕ್ತಿಗಳು ಕೂಡಲೇ ಸಮೀಪದ ಪೋಲಿಸ್ ಠಾಣೆಗೆ ತಮ್ಮ ದೂರು ಅಥವಾ ಫಿರ್ಯಾದು ನೀಡಬೇಕಾಗುತ್ತದೆ. ಪ್ರಸ್ತುತದಲ್ಲಿ ಈ ವಿಷಯವಾಗಿ ನಮ್ಮ ದೇಶದಲ್ಲಿ ಈ ಸೈಬರ್ ಅಪರಾಧಗಳ ಬಗೆಗಿನ ದೂರುಗಳನ್ನು ಸ್ವೀಕರಿಸಲು ಈ ಕೆಳಕಂಡ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಮೇರೆಗಿನ ಮತ್ತು ಇತರೇ ಅಪರಾಧಿಕ ಕಾನೂನುಗಳ ಮೇರೆಗೆ ಕ್ರಮ ಕೈಗೊಳ್ಳಲು ಶಕ್ತವಾಗಿರುತ್ತವೆ, ಅವು ಇಂತಿವೆ:
ವಿಶೇಷ ಸೈಬರ್ ಪೋಲಿಸ್ ಠಾಣೆ : ಈ ಸೈಬರ್ ಕ್ರೈಮ್‌ಗಳಿಗೆ ಸಂಬಧಿಸಿದಂತೆ ಮೀಸಲಾದ ವಿಶೇಷ ಸೈಬರ್ ಪೋಲಿಸ್ ಠಾಣೆಗಳನ್ನು ಬೆಂಗಳೂರು ಸೇರಿದಂತೆ ಮುಂಬೈ ಮತ್ತು ಹೈದರಾಬಾದ್‌ಗಳಲ್ಲಿ ಸ್ಥಾಪಿಸಲಾಗಿದೆ. ಇವುಗಳು ತಮ್ಮ ಪ್ರದೇಶ ವ್ಯಪ್ತಿಯಲ್ಲಿ ಆಗುವ ಯಾವುದೇ ಸೈಬರ್ ಪ್ರಕರಣಗಳ ಕುರಿತಾಗಿ ಅದರಲ್ಲೂ ಭಯೋತ್ವಾದಕ ಇ-ಮೇಲ್‌ಗಳ ಮೇಲೆ ಅಥವಾ ಅಂತರ್ಜಾಲದಲ್ಲಿ ಆಗುವ ಅಪರಾಧಗಳ ಮೇಲೆ ಸ್ವಯಃ ಪ್ರೇರಿತವಾಗಿ ಎಫ್.ಐ.ಆರ್ ದಾಖಲಿಸಿಕೊಳ್ಳುತ್ತವೆ ಮತ್ತು ತನಿಖೆ ನೆಡೆಸಲು ಅಧಿಕಾರ ಪ್ರದತ್ತವಾಗಿರುತ್ತವೆ. ಬೆಂಗಳೂರಿನಲ್ಲಿರುವ ಸೈಬರ್ ಪೋಲಿಸ್ ಠಾಣೆ ಇಡೀ ಕರ್ನಾಟದ ವ್ಯಾಪ್ತಿಯನ್ನು ಹೊಂದಿದ್ದು ಸ್ಥಳೀಯ ಪೋಲಿಸ್ ಠಾಣೆಯ ಸಹಾಯದಿಂದ ಕೆಲಸ ನಿರ್ವಹಿಸುತ್ತಿದೆ.ಪೋಲಿಸ್ ಠಾಣೆ : ಈ ವಿಶೇಷ ಸೈಬರ್ ಪೋಲಿಸ್ ಠಾಣೆಗಳ ವ್ಯಾಪ್ತಿ ಪ್ರದೇಶವನ್ನು ಹೊರತುಪಡಿಸಿದರೆ ಉಳಿದ ಪ್ರದೇಶಗಳಿಗೆ ಆಯಾ ಸ್ಥಳೀಯ ಪೋಲಿಸ್ ಠಾಣೆಗಳ ವ್ಯಾಪ್ತಿಗೆ ಪ್ರಕರಣಗಳನ್ನು ಕುರಿತು ಎಫ್.ಐ.ಆರ್ ದಾಖಲಿಸಿಕೊಳ್ಳುವುದು ಮತ್ತು ತನಿಖೆ ನೆಡೆಸುವ ಅಧಿಕಾರವಿರುತ್ತದೆ.
ಇಂತಹ ದೂರಿನ ಅಥವಾ ಫಿರ್ಯಾದಿನ ಮೇಲೆ ದೋಷಿತ ಕಾರ್ಯಾಚರಣೆ, ಇದರ ಬಗೆಯಿಂದ ನೊಂದಣಿ ಮಾಡಿಕೊಳ್ಳುವುದು, ನೊಂದಣಿಯ ಆಧಾರದ ಮೇಲೆ ವರದಿ ನೀಡುವುದು, ತನಿಖೆ ನೆಡೆಸುವುದು, ಕಾನೂನಿ ಕ್ರಮ ಜರುಗಿಸುವುದು, ನಿರ್ಣಯ ನೀಡುವುದು ಮತ್ತು ನಿರ್ಣಯದ ಮೇರೆಗೆ ನಿರ್ವಹಿಸುವುದು. ಇವುಗಳು ಕಾನೂನಿನ ವ್ಯವಸ್ಥೆಯಲ್ಲಿನ ಘಟ್ಟಗಳು ಮತ್ತು ಪಾಲಿಸಲೇಬೇಕಾದ ನಿಯಮಗಳು. ಇಂತಹ ಕಾನೂನು ಕ್ರಮ ಕೈಗೊಳ್ಳುವ ಮುಂಚೆ ಸೂಕ್ತ ಸಲಹೆಯನ್ನು ನುರಿತ ಕಂಪ್ಯೂಟರ್ ಪರಿಣಿತರನ್ನು ಅಥವಾ ವಕೀಲರನ್ನು ಸಂಪರ್ಕಿಸುವುದು ಒಳಿತು.
ಇತ್ತಿಚೀನವರೆಗೂ, ಸೈಬರ್ ಅಪರಾಧದ ಬಗಗೆ ಆಸಕ್ತಿಯ ಕೊರತೆಯಿಂದ ಮಾಹಿತಿ ತಂತ್ರಜ್ಞಾನದ ವೃತ್ತಿಪರರು ಹಲವು ಪ್ರಕರಣಗಳಲ್ಲಿ ತಾವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೊರತೆ ಎದುರಿಸಬೇಕಾಗಿತ್ತು. ಇತ್ತಿಚೀನ ಅಪರಾಧಗಳಿಗೆ ಇರುವ ಹಳೆಯ ಕಾನೂನುಗಳು ಸೂಕ್ತವಾದವುಗಳಲ್ಲ ಎನ್ನುವ ಅಭಿಪ್ರಾಯ ಒಪ್ಪುವಂತಹದು ಆದರೆ ಹೊಸ ಕಾನೂನುಗಳು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ನಿಜವಾಗಲು ಸಮರ್ಥನೀಯವೇ ಎಂಬ ಪ್ರಶ್ನೆ ಎದುರಿಸುತ್ತಿರುವುದು ಅಕ್ಷರಸಃ ಸತ್ಯ. ಇದರಿಂದಾಗಿಯೇ ಕಾನೂನು ರಚನಾಗಾರರು ಮತ್ತು ಇದನ್ನು ಕಾಪಾಡುವ ಸಂಸ್ಥೆಗಳು ಹಾಗೂ ಕಂಪ್ಯೂಟರ್ ವೃತ್ತಿಪರಾರು ಒಟ್ಟಾಗಿ ಇಂದು ಸೈಬರ್ ಅಪರಾಧಗಳನ್ನು ತಡೆಗಟ್ಟುವಂತಹ ಕೆಲಸ ಕೈಗೊಂಡು ಸಾರ್ವಜನಿಕರಿಗೆ ರಕ್ಷಣಾತ್ಮಕ ಇಂಟರ್‌ನೆಟ್ ಬಳಸಲು ವ್ಯವಸ್ಥೆಗೊಳಿಸಬೇಕಾಗುತ್ತದೆ.
ಸಂಗ್ರಹಿಸಿದ್ದು :
ಮೂಲ : ದಟ್ಸ್ ಕನ್ನಡ
Page copy protected against web site content infringement by Copyscape
hit counter
ಇಂದಿಗೆ ಭೇಟಿ ಮಾಡಿದವರು